ಉತ್ತರಗಳು ಎತ್ತರಗಳು -1 (ದಿನ - ೨)

(ಅಕ್ಟೋಬರ್ 16 ರಂದು ಅವಧಿಯಲ್ಲಿ ಪ್ರಕಟವಾಗಿತ್ತು. ಇಲ್ಲಿ ಹೆಚ್ಚಿನ ಚಿತ್ರಗಳೊಂದಿಗೆ...)

ಬಾಬಾ ಮಂದಿರ್ ಮತ್ತು ಚಂಗು ಸರೋವರಗಳು ಅಂದಾಜು ೧೨,೪೦೦ ಅಡಿ ಎತ್ತರದಲ್ಲಿರುವ ಸ್ಥಳಗಳು. ಅದರಲ್ಲೂ ನಾವು ಕ್ರಮಿಸುತ್ತಿದ್ದದ್ದು ಬಳಸು ದಾರಿಯಲ್ಲಿ. ದಾರಿಗುಂಟ ಸಿಗುವ ಚೆಕ್‍ಪೋಸ್ಟ್ಗಳಲ್ಲಿ ಅನುಮತಿ ಪಡೆಯುತ್ತ, ಮೈ ನವಿರೇಳಿಸುವ ಎತ್ತರ ಏರುತ್ತಿದ್ದೆವು. ಅದೆಷ್ಟು ಹೇರ್‌ಪಿನ್ ತಿರುವುಗಳನ್ನು ಬಳಸಿದೆವೋ ಗೊತ್ತಿಲ್ಲ! ಅಂದ್ಯಾಕೋ ಭಾಸ್ಕರ ನಮ್ಮ ಜೊತೆಗೇ ಇರುವ ನಿರ್ಧಾರ ಮಾಡಿದಂತಿತ್ತು.. ಬೆಳಗಿನಲ್ಲಿ ಕಂಡ ಬೆಳಕು ನನ್ನ ಕಣ್ಣಲ್ಲಿನ್ನೂ ಫಳ-ಫಳ ನಗುತಿತ್ತು!

ಮೇಲೆರಿದಂತೆ ಮಂಜು ಮುಸುಕಿದ ದಾರಿ... ಚಳಿಯ ಚುಮು ಚುಮು ಮೈ ತಾಗುತ್ತಿತ್ತು.. ಅಪ್ಪ-ಮಗರಿಬ್ಬರೂ fully packed ಆಗಿಬಿಟ್ಟರು.. ನಾ ಚಳಿ ಅನುಭವಿಸುತ್ತ ಮಂದಹಾಸದಲ್ಲಿದ್ದೆ! ನಡು-ನಡುವೆ ಮಂಜಿನ ತೆರೆ ಸರಿಸಿ ಭಾಸ್ಕರ ಬೆಚ್ಚಗಾಗಿಸುತ್ತಿದ್ದ... ನಂತರ ಚಳಿ, ಬಿಸಿಲು, ಬೆಳಕು, ಕತ್ತಲು, ಎಲ್ಲಾ ಮರೆತೋಯ್ತು... ಕಣ್ಣು ಕಂಡಿದ್ದು ಬಣ್ಣ-ಬಣ್ಣ! ಎತ್ತರ ಹೆಚ್ಚುತ್ತಿದ್ದಂತೆ ಭೂದೃಶ್ಯದಲ್ಲಿ ವಿಪರೀತ ವ್ಯತ್ಯಾಸ... ಇಂಥ ಸುಂದರ ಭೂಮಿಯನ್ನ ನಾ ಎಂದೂ ನಿಜದಲ್ಲಿ ಕಂಡಿದ್ದೇ ಇಲ್ಲ, ಪೋಸ್ಟರ್‌ಗಳಲ್ಲಿ ಕಾಣುವಂಥ ಸುಂದರ, ಸುಂದರ ಜಗತ್ತು!

ಆ ಎತ್ತರದಂಚಿನಲ್ಲಿ ಬಣ್ಣ-ಬಣ್ಣದ ಪೊದೆಗಳು, ಅಲ್ಲಿ-ಅಲ್ಲಿ ಹಸಿರಲ್ಲಿ ಸ್ವಚ್ಛ, ಸುಂದರ ಸರೋವರಗಳು, ನಿರಮ್ಮಳವಾಗಿ ಮೇಯುತ್ತಿದ್ದ ಕುದುರೆ, ಹಸು, ಯಾಕ್‍ಗಳು... ಬದುಕು ಆ ಕ್ಷಣದಲ್ಲಿ ಫ್ರೀಜ಼್ ಆಗಿಬಿಡಬೇಕು ಅನಿಸಿತ್ತು :-) ಬಣ್ಣಗಳಿಗೆ ಕೊರತೆಯಿರದ ಲೋಕವ ನೋಡಲು ಎರಡೂ ಕಣ್ಣು ಸಾಲದಾಗಿದ್ದವು.. ಕಾರ್ ಇಳಿದು ಓಡಿ ಹೋಗುವ ಮನಸಾಗಿತ್ತು... ಕ್ಯಾಮೆರಾ ಕಣ್ಣರಳಿಸಲು... ಆದರೆ ಕಾರ್‌ನ ಚಾಲಕ ನಾನ್-ಸ್ಟಾಪ್, ಜೊತೆಗೆ ನಿಸರ್ಗದ ನಿಬಂಧನೆಗಳು (ಯಾವಾಗ ಮಳೆ ಬರುತ್ತೋ, ಯಾವಾಗ ಪಯಣ ಕಠಿಣವಾಗುತ್ತೋ, ಗೊತ್ತಿರದ ದುಗುಡಗಳು - ಮರಳಿ ಹೋಗಲೂ ೫-೬ ಗಂಟೆಗಳು ಬೇಕಾಗಬಹುದು ಎಂಬ ಯೋಚನೆ, ಹೀಗೇ...)

ಆದರೆ ನನಗೆ ಪ್ರಕೃತಿಯ ಸೆಳೆತ ವಿಪರೀತ! ಆ ಬಣ್ಣ-ಬಣ್ಣದ ನೆಲ ಹಾಸಿನಲ್ಲಿ ಅದೆಂಥೆಂಥ ಪೊದೆಗಳಿವೆ ಅಂತ ನೋಡೋ ಕುತೂಹಲ... ಆಗಲೇ ನನಗೆ ಹೊಳೆದ ಉಪಾಯ ನೇಚರ್ ಕಾಲ್‌ದು ;-) (Of course nature was calling me!). ಗಾಡಿ ನಿಂತಿತು. ಎಲ್ಲರೂ ಅವರವರ ನೇಚರ್ ಕಾಲ್ ಮುಗಿಸಿದರು. ನಾನೂ ಓಡಿದ್ದೆ ನೇಚರ್ ಕಾಲ್‍ನೆಡೆಗೆ ಕ್ಯಾಮೆರಾದೊಂದಿಗೆ... ಆಗ ಕಣ್ಣಿಗೆ ಕಂಡ ಹೂಗಳು.. ಓಹ್! ಅನಿವರ್ಚನೀಯ... ಭಗವಂತನ ಕಲಾ-ಕುಸುರಿಯ ಅಪ್ರತಿಮತೆ ಮೆರೆಯುತ್ತಿದ್ದ ಹೂಗಳು.. ಚೆಲುವ ನಾಚಿಸುವಂಥವು... ಅಷ್ಟೊತ್ತಿಗೆ ಬೇರೆಯವರ ಕಾಲ್ ಕೇಳಿಸಿತು.. ’ತಡವಾಗ್ತಾ ಇದೆ, ಬೇಗ ಬಾ!’ ಬ್ಯಾಕ್ ಟು ಕಾರ್..

ಸ್ವಲ್ಪ ದೂರ ಕ್ರಮಿಸಿದ ನಂತರ ನಾವು ಬಾಬಾ ಮಂದಿರ್ ತಲುಪಿದ್ದೆವು.. ಅದರ ಬಗ್ಗೆ ಆಗಲೇ ಗೆಳತಿಯರೊಡನೆ ಚರ್ಚಿಸಿ, ಅಂತರ್ಜಾಲದಲ್ಲಿ ವಿವರ ತಿಳಿದಿದ್ದರಿಂದ ಆ ಸ್ಥಳದ ಬಗ್ಗೆ ಒಂದು ಮಟ್ಟಿಗೆ ತಿಳುವಳಿಕೆ ಇತ್ತು. ಕೋಶ ಓದುವುದು, ದೇಶ ನೋಡುವುದೂ ಎರಡು ಜ್ಞಾನ ಕೊಡುತ್ತವೆ, ಅನುಭವ ಕೊಡುತ್ತವೆ, ಆದರೆ ಅವುಗಳ ಪರಿ ಬೇರೆ ಅಷ್ಟೇ! ಬಾಬಾ ಮಂದಿರ್ ಹತ್ತಿರ ಇಳಿದ ಕ್ಷಣ ಮೂಡಿದ ಭಾವ - ಪ್ರಾಯಶಃ ಗೌರವ, ಭಕ್ತಿ, ಆನಂದ, ಆಶ್ಚರ್ಯ ಇವುಗಳೆಲ್ಲದರ ಮಿಶ್ರಣವಾಗಿತ್ತು ಅನ್ಸತ್ತೆ ಅಥವಾ ನನ್ನಲ್ಲಿ ಮೂಡಿದ ಭಾವನೆಗಳನ್ನು ಪ್ರಾಯಶಃ ಸರಿಯಾಗಿ ವಿವರಿಸಲು ಬರುವುದಿಲ್ಲವೇನೋ ಅನ್ಸತ್ತೆ! ಅಲ್ಲಿ ನಡೆದದ್ದರ ಬಗ್ಗೆ ವಿವರಿಸಬಹುದು… ನವಿರಾದ ಪಂಜಾಬಿ ಭಜನ್, ಹಲವಾರು ಸೈನಿಕರು,  ಹರಭಜನ್ ಸಿಂಗ್ ಬಾಬಾ ಅವರ ವೃತ್ತಾಂತದ ಕುರಿತು ಒಂದು ದೊಡ್ಡ ಫಲಕ, ಅದರ ಪಕ್ಕವೇ ಮಿಲಿಟರಿ ಕ್ಯಾಂಟೀನ್.  ಅಂದು ಭಾನುವಾರವಾದ್ದರಿಂದ ಪ್ರಸಾದದ ರೂಪದಲ್ಲಿ ನಮಗೆ ಸೈನಿಕರ ಕೈಯೂಟ...! ಸರಳ, ರುಚಿಕರ ಊಟ, ಕುಡಿಯಲು ಬಿಸಿ ನೀರು, ಆದರಾತೀಥ್ಯ ನೋಡಿ ನಾನಂತೂ ಭಾವುಕಳಾಗಿಬಿಟ್ಟಿದ್ದೆ… ಸೌಭಾಗ್ಯವೆಂದರೆ ಇದೇನಾ ಅನಿಸಿಬಿಟ್ಟಿತ್ತು...! ಇವರೂ ಮೂಕರಾಗಿದ್ದರು… ಸೈನ್ಯವೆಂದರೆ ಇವರಿಗೂ ಅದೇನೋ ಶ್ರದ್ಧೆ, ಗೌರವ, ಆಕರ್ಷಣೆ…


ಬಾಬಾ ಅವರ ಕಥೆ ರೋಚಕ! ೧೯೬೬ ರಲ್ಲಿ ಸಿಪಾಯಿ ಹುದ್ದೆಯಲ್ಲಿ ಅವರು ಸೈನ್ಯ ಸೇರಿದ್ದರು. ೧೯೬೮ರಲ್ಲಿ ನೈಸರ್ಗಿಕ ವೈಪರೀತ್ಯದಿಂದ ಸಿಕ್ಕಿಂ, ಮತ್ತು ಉತ್ತರ ಬಂಗಾಳದಲ್ಲಿ ಸಾವಿರಾರು ಜನರ ಸಾವು ಸಂಭವಿಸಿತ್ತು. ಇಂಥದೇ ಒಂದು ದಿನ, ಅಕ್ಟೊಬರ್ ೪, ೧೯೬೮ರಲ್ಲಿ ಬಾಬಾ ಅವರು ತುಕುಲಾನಿಂದ ಡೆಂಗ್‍ಚುಕ್ಲಾಗೆ ಕೆಲವು ಜನರನ್ನು ಹೇಸರಗತ್ತೆಯ ಮೇಲೆ ಸಾಗಿಸುತ್ತಿರುವಾಗ ಜೋರಾಗಿ ಹರಿಯುತ್ತಿದ್ದ ಒಂದು ಪ್ರವಾಹದಲ್ಲಿ ಕಾಲ್ಜಾರಿ ಬಿದ್ದು ಮುಳುಗಿ ಹೋದರು. ಅವರು ನಾಪತ್ತೆಯಾದ ೫ನೇ ದಿನದಂದು ಅವರು ತಮ್ಮ ಸಹೋದ್ಯೋಗಿ ಪ್ರೀತಂ ಸಿಂಗ್‍ನ ಕನಸಲ್ಲಿ ಬಂದು, ತನ್ನ ಜೊತೆ ನಡೆದ ಆ ದಾರುಣ ಘಟನೆಯ ವಿವರಗಳನ್ನು ನೀಡಿ, ತಮ್ಮ ಮೃತ ಶರೀರ ಹಿಮದ ಗುಡ್ಡೆಯ ಕೆಳಗೆ ಮುಚ್ಚಿಹಾಕಿಕೊಂಡಿದೆ ಎಂದು ತಿಳಿಸಿದರಂತೆ, ಹಾಗೇ ತನಗಾಗಿ ಒಂದು ಸಮಾಧಿಯನ್ನೂ ನಿರ್ಮಿಸುವಂತೆ ಆಸೆ ವ್ಯಕ್ತ ಪಡಿಸಿದರಂತೆ. ಪ್ರೀತಮ್ ಸಿಂಗ್ ಇದೆಲ್ಲ ತಮ್ಮ ಕಲ್ಪನೆಯಷ್ಟೇ ಅಂತ ಆ ಕನಸನ್ನು ನಿರ್ಲಕ್ಷಿಸಿದರಂತೆ. ಆದರೆ ಕೆಲ ದಿನಗಳ ನಂತರ ಹರಭಜನ್ ಸಿಂಗ್ ಅವರ ಮೃತ ದೇಹ ಪ್ರೀತಂ ಸಿಂಗ್‍ಗೆ ಕನಸಿನಲ್ಲಿ ತಿಳಿಸಿದ ಜಾಗದಲ್ಲೇ ದೊರೆತಾಗ ಎಲ್ಲರೂ ಆಶ್ಚರ್ಯಚಕಿತರಾದರಂತೆ. ಹರಭಜನ್ ಸಿಂಗ್ ಅವರಿಗೆ ಗೌರವ ನೀಡಲೆಂದು ಅವರಾಸೆಯಂತೆ ಅವರ ಸಮಾಧಿಯನ್ನು ಛೋಕ್ಯಾಛೋ ಬಳಿ ನಿರ್ಮಿಸಲಾಗಿದೆ. ಅವರು ಇಂದಿಗೂ ಗಡಿ ಪ್ರದೇಶದಲ್ಲಿ ನಡೆಯುವ ಅಪಾಯಕಾರಿ ಚಟುವಟಿಕೆಗಳ ಬಗ್ಗೆ ಸೈನಿಕರ ಕನಸಲ್ಲಿ ಬಂದು ಮಾಹಿತಿ ನೀಡುವರೆಂಬ ನಂಬಿಕೆಯಿದೆ. ಚೀನಾ ಸೈನಿಕರೂ ಸಹ ಈ ಸತ್ಯವನ್ನು ನಂಬುತ್ತಾರೆ. ಇಂದಿಗೂ ಹರಭಜನ್ ಸಿಂಗ್ ಅವರ ಕಛೇರಿ (ಹೊಸ ಬಾಬಾ ಮಂದಿರ್ ಬಳಿ) ಕಾರ್ಯ ನಿರತವಾಗಿದೆ. ಅವರಿಗೀಗ ಸೈನ್ಯದಲ್ಲಿ ಗೌರವಾರ್ಥಕ ಕ್ಯಾಪ್ಟೇನ್ ಹುದ್ದೆ ನೀಡಲಾಗಿದೆ. (ಪಕ್ಕದ ಚಿತ್ರದಲ್ಲಿರುವ ಮಾಹಿತಿ ಓದಿ).

ಬಾಬಾ ಮಂದಿರ್‌ನಿಂದ ಸ್ವಲ್ಪವೇ ದೂರದಲ್ಲಿ ಹೊಸ ಬಾಬಾ ಮಂದಿರ್ ಇದೆ. ಅಲ್ಲಿಯೇ ಅವರ ಕಛೇರಿಯಿದೆ, ಅವರ ಹಾಸಿಗೆ, ಚಪ್ಪಲಿಗಳು, ಬೂಟುಗಳು, ಯೂನಿಫಾರ್ಮ್, ಅವರಿಗೆ ಬಂದ ಪತ್ರಗಳು ಎಲ್ಲದರ ಸಂಗ್ರಹವಿದೆ. ಫೋಟೊ ತೆಗೆಯಲು ಯಾವುದೇ ಕಟ್ಟಳೆಯಿಲ್ಲ.. ಮಂದಿರ್‌ ಇರುವ ಸ್ಥಳ ರಮಣೀಯ. ಬಾಬಾಗೆ ಈಗಲೂ ವಾರ್ಷಿಕ ರಜೆಗಳು, ಸಂಬಳ ಸಂದಾಯವಾಗುತ್ತವೆ.

ಅಲ್ಲಿಂದ ನಮ್ಮ ಪಯಣ ಚಂಗು ಸರೋವರದೆಡೆಗೆ. ಹಾದಿಯಲ್ಲಿ ನಾಥುಲಾ ಪಾಸ್‌ಗೆ (ಭಾರತ-ಚೀನಾ ಗಡಿ) ಹೋಗುವ ದಾರಿ, ಭಾರತ-ಚೀನಾ ಗಡಿ ವ್ಯಾಪಾರ ಪ್ರದೇಶಗಳು, ಇವುಗಳನ್ನೆಲ್ಲ ನೋಡುತ್ತ ಮುನ್ನಡೆದಾಗ ಕಂಡದ್ದು ಮೋಡದ ಮಧ್ಯದಲ್ಲೂ ಸೂರ್ಯನ ಹೊಳಹನ್ನು ಪ್ರತಿಫಲಿಸುತ್ತಿದ್ದ ಪ್ರಶಾಂತ ಚಂಗು ಸರೋವರ.

Tsomgo ಅಂದರೆ ಭುತಿಯಾ ಭಾಷೆಯಲ್ಲಿ ನೀರಿನ ಮೂಲ ಎಂದು ಅರ್ಥವಂತೆ.  ದೈವಿಕ ಸೌಂದರ್ಯವುಳ್ಳ ಈ ಸರೋವರ, ಬೇರೆ-ಬೇರೆ ಋತುಗಳಲ್ಲಿ ಬೇರೆ-ಬೇರೆಯಾಗಿ ಕಾಣುವುದು. ಚಳಿಗಾಲದಲ್ಲಿ ಸಂಪೂರ್ಣವಾಗಿ ಹೆಪ್ಪುಗಟ್ಟುವ ಈ ಸರೋವರ, ವಸಂತದಲ್ಲಿ ಬಣ್ಣ-ಬಣ್ಣದ ಹೂಗಳ ಆವರಣದಿಂದ (ಸರೋವರವನ್ನು ಸುತ್ತುವರೆದ ಬೆಟ್ಟಗಾಡಿನಲ್ಲಿ ಅರಳುವ ಹೂಗಳಿಂದ) ಅಲಂಕರಿಸಲ್ಪಡುತ್ತದೆ. ನನಗೆ ಅಕ್ಟೋಬರ್ ತಿಂಗಳಲ್ಲೇ ಬಣ್ಣಗಳ ರಾಶಿ ಕಂಡದ್ದಾಗಿದೆ… ಹಾಗಾದರೆ ಇಲ್ಲಿನ ವಸಂತ ಹೇಗಿರಬೇಡ?!!

ಈ ಸರೋವರವನ್ನು ಸಿಕ್ಕಿಂ ಪ್ರಾಂತದ ಜನ ಪವಿತ್ರವೆಂದು ಪರಿಗಣಿಸುತ್ತಾರೆ (ಮತ್ತು ಇದು ನಿಜಕ್ಕೂ ಪವಿತ್ರ, ಶುದ್ಧ…! ಗಂಗೆಯ ನೆನಪಾಗುತ್ತಿದೆ  :-( ) ಹಳೆಯ ಕಾಲದಲ್ಲಿ ಬೌದ್ಧ ಧರ್ಮದ ಗುರುಗಳು ಭವಿಷ್ಯವನ್ನು ಊಹಿಸಲು ಈ ಸರೋವರದ ಬಣ್ಣ ಬದಲಾವಣೆಯನ್ನು ಅಭ್ಯಸಿಸುತ್ತಿದ್ದರಂತೆ. ಇಂದಿಗೂ ಗುರು ಪೂರ್ಣಿಮೆಯ ದಿನ ಈ ಸರೋವರಕ್ಕೆ ಪ್ರಾರ್ಥನೆ ಸಲ್ಲಿಸಲು ರಾಜ್ಯದ ಜನತೆ ಒಟ್ಟುಗೂಡುತ್ತಾರಂತೆ.

ಇಂಥ ನಯನ ಮನೋಹರ ಸ್ಥಳದಲ್ಲಿ, ಸೈನಿಕರೊಂದಿಗೆ ಕೆಲವು ಮೌನ ನಿಮಿಷಗಳನ್ನು ಆಚರಿಸಿ ಹೊರಡಲು ಅನುವಾಗುತ್ತಿದ್ದಂತೆ ಒಂದು ನಾಚಿಕೆ ಸ್ವಭಾವದ ಯಾಕ್ ಒಂದೆರಡು ಫೋಟೊಗಳಿಗೆ ಪೋಸ್ ಕೊಟ್ಟು ಓಡಿ ಹೋಯಿತು. ಮತ್ತೆ ನಮ್ಮ ಕಾರ್ ಚಾಲಕನ ಕರೆ! ಹೆಜ್ಜೆ ಕಿತ್ತಿಡಲಾಗದೇ ಹೊರಟಿದ್ದಾಯಿತು. ವಾಪಸ್ ಹೊರಡುವಾಗ ಗ್ಯಾಂಗ್‍ಟಾಕ್ ಮತ್ತು ಚಂಗು ಸರೋವರದ ನಡುವಣ ಸನಿಹದ ಮಾರ್ಗ ತೆರೆದಿತ್ತು ಎಂದು ಮಾಹಿತಿ ದೊರೆಯಿತು. ನಿರಮ್ಮಳವಾಗಿ ಅಲ್ಲಿಂದ ಹೊರಟರೆ… ಆ ದಾರಿ ನೋಡಿ ನಾವೆಲ್ಲ ದಂಗು! ದುರ್ಗಮ ದಾರಿ, ಅಲ್ಲಲ್ಲಿ ಕಾಣುವ ಲ್ಯಾಂಡ್ ಸ್ಲೈಡ್, ರೊಜ್ಜು-ರೊಜ್ಜು ರಸ್ತೆ, ಜಿಟಿ-ಜಿಟಿ ಮಳೆ...

ಗಂಟೆಗಟ್ಟಲೇ ಹರ್ಷ, ಗೌರವ, ಆಶ್ಚರ್ಯ, ಭಕ್ತಿ ಇಂಥ ನವಿರು ಭಾವಗಳಲ್ಲೇ ಕಳೆದುಹೋಗಿದ್ದವರಿಗೆ, ಈ ಸಾಹಸಮಯ ಪಯಣ ಬೇರೆ ಬದಲಾವಣೆಯನ್ನೇ ತಂದಿತ್ತು.. ಹೆಜ್ಜೆ-ಹೆಜ್ಜೆಗೂ ನಾವು ಜಾಗೃತರಾಗಿಬಿಟ್ಟಿದ್ದೆವು… ಕಳೆದು ಹೋದರೆ ಖಾಯಂ ಆಗಿ ಕಳೆದು ಹೋಗೋ ಅಪಾಯ :-) ಅಂತೂ-ಇಂತೂ ಸುರಕ್ಷಿತವಾಗಿ ಗ್ಯಾಂಗ್‍ಟಾಕ್ ಸೇರಿಯಾಗಿತ್ತು. ನೆನಪಿನಂಗಳಕ್ಕೆ ಇನ್ನೊ(ನ್ನೆ)ಂ(ದೂ) ಮರೆಯದ ದಿನವೊಂದು ಸೇರ್ಪಡೆಯಾಗಿತ್ತು :-) ಮತ್ತೆ ಮಳೆ ಸುರಿಯತೊಡಗಿತ್ತು ...!

Comments

sunaath said…
ಅಬ್ಬಾ! ಇದು ಅಧ್ಯಾತ್ಮದ ಅನುಭವವನ್ನು ಕೊಡುವ ಸ್ಥಳ ಎಂದು ಅನಿಸುತ್ತದೆ!
ಎರಡನೇ ಭಾಗದಲ್ಲಿ ಪ್ರಕೃತಿಯ ವರ್ಣನೆ ಕಾವ್ಯಮಯವಾಗಿದೆ.

ಸೈನಿಕರ ಊಟದ ವಿವರ ಇನ್ನೂ ಬೇಕಾಗಿತ್ತು.

ಹರಿಭಜನ್ ಸಿಂಗ್ – ಬಾಬಾ ಅವರ ವೃತ್ತಾಂತ ಇಷ್ಟವಾಯಿತು.

ನೀವು ಒಳ್ಳೆಯ ಛಾಯಾಗ್ರಾಹಕರು ಎಂಬುದು ಚಿತ್ರಗಳಿಂದ ಗೊತ್ತಾಗುತ್ತದೆ.

ಒಳ್ಳೆಯದಾಗಲಿ.

Popular Posts